ಡಾ. ನಾಗರಾಜ ರಾವ್ ಹವಾಲ್ದಾರ್ (ಕನ್ನಡ:ನಾಗರಾಜ ರಾವ್ ಹವಲ್ದಾರ್) ಅವರು ಭಾರತದ, ಕರ್ನಾಟಕದ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿದ್ದಾರೆ. == ಶಿಕ್ಷಣ == === ಸಂಗೀತ === ಡಾ. ಹವಾಲ್ದಾರ್ ಅವರು ಕಿರಾಣಾ ಶ್ರೇಷ್ಠರಾದ ಪಂಡಿತ್ ಭೀಮಸೇನ ಜೋಶಿಯವರ ಮುಖ್ಯ ಶಿಷ್ಯರಲ್ಲೊಬ್ಬರಾದ ಪಂಡಿತ್ ಮಾಧವ ಗುಡಿಯವರ ಶಿಷ್ಯರಾಗಿದ್ದಾರೆ. ಹವಾಲ್ದಾರ್ ಅವರು ಜೈಪುರ-ಅತ್ರೌಲಿ ಘರಾನಾದ ಮಲ್ಲಿಕಾರ್ಜುನ ಮನ್ಸೂರ್ ಅವರ ಹಿರಿಯ ಶಿಷ್ಯರಲ್ಲೊಬ್ಬರಾಗಿರುವ ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರ ಶಿಷ್ಯರೂ ಸಹ ಆಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಆರು ವರ್ಷದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಸಂಗೀತ ರತ್ನ" ಪದವಿಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಹವಾಲ್ದಾರ್ ಅವರು ಪಂಡಿತ ಮಲ್ಲಿಕಾರ್ಜುನ ಮನ್ಸೂರ್ (ಸಂಗೀತ ವಿಭಾಗದ ಮುಖ್ಯಸ್ಥರು), ಮತ್ತು ಪ್ರತಿಭಾಶಾಲಿ ಪ್ರಾಧ್ಯಾಪಕರುಗಳಾದ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಪಂಡಿತ್ ಬಸವರಾಜ ರಾಜಗುರು (ಕಿರಾಣಾ), ಪಂಡಿತ್ ಸಂಗಮೇಶ್ವರ ಗುರಾವ (ಕಿರಾಣ) ಮತ್ತು ಡಾ. ಬಿ.ಡಿ. ಪಾಠಕ್ ಅವರುಗಳ ಅಡಿಯಲ್ಲಿ ಅಧ್ಯಯನ ಮಾಡಿದರು. === ಶಿಕ್ಷಣ === ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಸಂಗೀತ ರತ್ನ" ಪದವಿಯಲ್ಲಿ ಉನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಇವರು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ದ ಎಂ.ಎ.ಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ ಮತ್ತು ಕರ್ನಾಟಕದ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಡಾಕ್ಟರೇಟ್‌ ಅನ್ನು ಪಡೆದಿದ್ದು, ಇವರ ಡಾಕ್ಟರೇಟ್ ಪ್ರಬಂಧವು "ಕರ್ನಾಟಕದಲ್ಲಿ ಶಾಸ್ತ್ರೀಯ ಸಂಗೀತದ ಇತಿಹಾಸ" ಎನ್ನುವುದಾಗಿತ್ತು. == ವೃತ್ತಿಜೀವನ == === ಪ್ರದರ್ಶನಗಳು === ಇವರು ಹಂಪಿ ಉತ್ಸವ, ಮೈಸೂರು ದಸರಾ ದರ್ಬಾರ್ ಉತ್ಸವ ಮತ್ತು ವಾರಣಾಸಿಯಲ್ಲಿನ ಸಂಕಟ ಮೋರ್ಚಾ ಸಂಗೀತ ಸಮಾರೋಹವನ್ನು ಒಳಗೊಂಡು ಭಾರತದಾದ್ಯಂತ ಹಲವಾರು ಪ್ರಸಿದ್ಧ ಸ್ಥಳಗಳಲ್ಲಿ ಪ್ರದರ್ಶನವನ್ನು ನೀಡಿರುತ್ತಾರೆ. ಹಾಗೆಯೇ ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ನ ಪ್ರವಾಸವನ್ನು ಸಹ ಕೈಗೊಂಡಿದ್ದಾರೆ. ಇವರ ಶೈಲಿಯು ಕಿರಾಣಾ ವಿದ್ವಾಂಸರಿಂದ ಇವರು ಪಡೆದ ನುರಿತ ತರಬೇತಿಯನ್ನು ಪ್ರತಿಬಿಂಬಿಸುತ್ತದೆ, ಇವರು ಬಸಂತಿ ಕೇದಾರ, ಬಸಂತಿ ಕಾನಡ ಮತ್ತು ನಟ ಮಲ್ಹಾರದಂತಹ ಜೈಪುರ-ಅಟ್ರೌಲಿ ವಿಶೇಷತೆಗಳಲ್ಲಿಯೂ ಸಹ ಅಷ್ಟೇ ಪರಿಣತಿಯನ್ನು ಹೊಂದಿದ್ದಾರೆ. ವಚನಗಳನ್ನು, ಹರಿದಾಸರ ಸಾಹಿತ್ಯಿಕ ಕಾರ್ಯಗಳನ್ನು ಕನ್ನಡ ಖಯಾಲ್ ಅನ್ನು ಮತ್ತು ಕನ್ನಡದ ಸೂಕ್ತ ಸಮಕಾಲೀನ ಕವನಗಳನ್ನು ಸಾಂಪ್ರದಾಯಿಕ ಖಯಾನ್ ರೂಪದಲ್ಲಿ ಜನಪ್ರಿಯಗೊಳಿಸಿದರಲ್ಲಿ ಇವರು ಅಗ್ರಗಣ್ಯರಾಗಿದ್ದಾರೆ. ನೇರ ಪ್ರದರ್ಶನಗಳ ಜೊತೆಗೆ, ಡಾ. ಹವಾಲ್ದಾರ್ ಅವರು ಖಯಾಲ್ ಮತ್ತು ಲಘು ಪ್ರಕಾರಗಳಲ್ಲಿ ಹಲವಾರು ಆಲ್ಬಮ್‌ಗಳನ್ನು ಸಿದ್ಧಪಡಿಸಿದ್ದಾರೆ.. ಇವರು ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಚಾರಕ್ಕೆ ಮೀಸಲಾಗಿರುವ ಸುನಾದ ಕಲಾ ಫೌಂಡೇಶನ್ ನ ಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ. === ಸಂಗೀತ ರಚನೆ === ಸಂಗೀತ ರಚನಾಕಾರರಾಗಿ, ಡಾ. ಹವಾಲ್ದಾರ್ ಅವರು ಹಲವಾರು ನಾಟಕಗಳು ಮತ್ತು ಟೆಲವಿಷನ್ ಕಾರ್ಯಕ್ರಮಗಳಿಗೆ ಸಂಗೀತಗಳನ್ನು ನೀಡಿದ್ದು, ಅವುಗಳಲ್ಲಿ ಗಿರೀಶ್ ಕಾರ್ನಾಡ್ ಅವರ ತಲೆದಂಡ , ರೂಪಾಂತರ ನಾಟಕ ತಂಡವು ಪ್ರದರ್ಶಿಸಿದ ಪಿ. ಲಂಕೇಶ್ ಅವರ ಗುಣಮುಖ , ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ದ ಟೆಲವಿಷನ್ ಆವೃತ್ತಿ ಮತ್ತು ಟಿ.ಎನ್.ಸೀತಾರಾಮ್ ಅವರ ಟೆಲಿವಿಷನ್ ಧಾರಾವಾಹಿ, ಮುಖಾಮುಖಿ ಸೇರಿವೆ. ಇವರು ಧಾರ್ಮಿಕ ವಸ್ತು ವಿಷಯದ ನಾಟಕದ ಸಂಗೀತಕ್ಕೆ ಸಂಬಂಧಿಸಿದಂತೆ ಇಂಡಿಯಾನಾಪೋಲಿಸ್‌ನಲ್ಲಿನ ನಾಟಕ ಸಮೂಹದ ಜೊತಗೂ ಸಹ ಕಾರ್ಯನಿರ್ವಹಿಸಿದ್ದಾರೆ. === ಅಧ್ಯಾಪನೆ === ಹವಾಲ್ದಾರ್ ಅವರು ನಿಯಮಿತವಾಗಿ ಸಂಗೀತದ ಮೂಲಕ ಒತ್ತಡದ ನಿರ್ವಹಣೆ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮನ್ನಣೆ ಎಂಬಂತಹ ವಿಷಯಗಳ ಕುರಿತಂತೆ ವಿಪ್ರೋ, ಕಂಪ್ಯೂಟರ್ ಅಸೋಸಿಯೇಟ್ಸ್, ಬಿರ್ಲಾ 3ಎಮ್ ಮತ್ತು ಖೋಡೇಸ್ ಅಂತಹ ಕಂಪನಿಗಳಿಗೆ ಸಂಗೀತದ ಬಗ್ಗೆ ಉಪನ್ಯಾಸ-ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುತ್ತಾರೆ. ಡಾ. ಹವಾಲ್ದಾರ್ ಅವರು ಸ್ಥಳೀಯವಾಗಿ ಬೆಂಗಳೂರಿನಲ್ಲಿ ಜೊತೆಗೆ ಅಂತರಾಷ್ಟ್ರೀಯವಾಗಿ ಕಾರ್ಯಾಗಾರಗಳು ಮತ್ತು ದೂರವಾಣಿ ಸೆಷನ್‌ಗಳ ಮೂಲಕ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸಿದ್ದಾರೆ ಮತ್ತು ಕಲಿಸುವುದನ್ನು ಮುಂದುವರಿಸಿದ್ದಾರೆ. ಇವರ ಹಲವಾರು ವಿದ್ಯಾರ್ಥಿಗಳು ಸ್ವತಃ ಪ್ರಮುಖ ಸಂಗೀತಕಾರರಾಗಿದ್ದು, ಅವರಲ್ಲಿ ಪ್ರಮುಖವಾಗಿ ಇವರ ಮಗನಾದ ಓಂಪ್ರಕಾಶ್ ಹವಾಲ್ದಾರ್ ಮತ್ತು ಕನ್ನಡ ಹಿನ್ನೆಲೆ ಗಾಯಕಿಯಾದ ಚೈತ್ರಾ ಹೆಚ್‌ಜಿ ಸೇರಿದ್ದಾರೆ. === ಇತರೆ === ಡಾ. ಹವಾಲ್ದಾರ್ ಅವರು ಈ ಹಿಂದೆ ಮ್ಯೂಸಿಕ್ ಆರ್ಕೈವ್ಸ್, ಆಲ್ ಇಂಡಿಯಾ ರೇಡಿಯೋ, ಹುಬ್ಬಳ್ಳಿ (1988-1991) ಇಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಇವರು ಪಠ್ಯಪುಸ್ತಕಗಳ ನಿರ್ದೇಶನಾಲಯ, ಕರ್ನಾಟಕ ಇದರ ಹಿಂದೂಸ್ತಾನಿ ಸಂಗೀತದ ಪಠ್ಯಪುಸ್ತಕ ಸಮಿತಿಯ ಮಾಜಿ ಅಧ್ಯಕ್ಷರೂ ಸಹ ಆಗಿದ್ದಾರೆ. == ವೈಯಕ್ತಿಕ ವಿವರಗಳು == ಡಾ. ಹವಾಲ್ದಾರ್ ಅವರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಜನಿಸಿದರು ಮತ್ತು ಪದವಿಯವರೆಗೆ ಅವರು ಇಲ್ಲಿಯೇ ತಮ್ಮ ಬಾಲ್ಯ ಜೀವನವನ್ನು ಕಳೆದರು. ಪ್ರಸ್ತುತ ಹವಾಲ್ದಾರ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಮಕ್ಕಳಾದ ಓಂಕಾರನಾಥ್ ಮತ್ತು ಕೇದಾರನಾಥ್ ಅವರು ಉದಯೋನ್ಮುಖ ಸಂಗೀತಕಾರರಾಗಿದ್ದಾರೆ - ಓಂಕಾರನಾಥ್ ಅವರು ಗಾಯಕರಾಗಿದ್ದರೆ ಕೇದಾರನಾಥ್ ಅವರು ತಬಲಾಪಟುವಾಗಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಡಾ. ನಾಗರಾಜ ರಾವ್ ಹವಾಲ್ದಾರ್ 2011-02-03 ವೇಬ್ಯಾಕ್ ಮೆಷಿನ್ ನಲ್ಲಿ.